Farmers
ನೂತನ ವರ್ಷದ ಆರಂಭದಲ್ಲಿಯೇ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರು ಹೊಸ ವರ್ಷದ ಕೊಡುಗೆಯಾಗಿ ದೇಶದ ಎಲ್ಲಾ ರೈತರಿಗೂ ಅನುಕೂಲವಾಗುವಂತಹ ಘೋಷಣೆಯೊಂದನ್ನು ಮಾಡಿದ್ದಾರೆ. ಪ್ರಮುಖ ಎರಡು ಕೃಷಿ ಯೋಜನೆಗಳ ಅವಧಿ ವಿಸ್ತರಣೆ ಮಾಡಿ ರೈತ ವರ್ಗಕ್ಕೆ ಬಂಪರ್ ಗಿಫ್ಟ್ ನೀಡಿದ್ದಾರೆ.
ಈ ನಿರ್ಣಯ ಕೈಗೊಳ್ಳುವ ಮೂಲಕ 2025ರ ಮೊದಲ ಕ್ಯಾಬಿನೆಟ್ನ ಮೊದಲ ನಿರ್ಣಯನ್ನು ದೇಶದ ಕೋಟಿ ಕೋಟಿ ರೈತರಿಗಾಗಿ ಅರ್ಪಿಸಲಾಗಿದೆ. ಯಾವ ಯೋಜನೆಗಳು, ಈ ಅವಕಾಶದಿಂದ ರೈತರಿಗೆ ಏನೆಲ್ಲಾ ಅನುಕೂಲ ಆಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಬುಧವಾರ ರಾಜಧಾನಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ದೇಶದ ರೈತ ವರ್ಗದ ಅಭಿವೃದ್ದಿಗಾಗಿ ಹಲವಾರು ರೈತ ಪರ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಪ್ರಮುಖವಾಗಿ DAP ರಸಗೊಬ್ಬರ ಖರೀದಿಗೆ NBS ಸಬ್ಸಿಡಿ ಹೊರತುಪಡಿಸಿ ಒಂದು ಸಮಯಕ್ಕೆ ಅನ್ವಯವಾಗುತ್ತಿದ್ದ ವಿಶೇಷ ಪ್ಯಾಕೇಜ್ ನ್ನು ಜ.1.ರಿಂದ ಮುಂದಿನ ಆದೇಶದವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಸರ್ಕಾರದ ಮುಂದಿನ ಆದೇಶದವರೆಗೂ ಇದು ಜಾರಿಯಲ್ಲಿರಲಿದೆ. ರೈತರಿಗೆ ಕಡಿಮೆ ದರದಲ್ಲಿ DAP ರಸಗೊಬ್ಬರ ಸಿಗುವಂತೆ ಮಾಡುವ ಉದ್ದೇಶವು ಸರ್ಕಾರದ್ದಾಗಿದೆ. ಇದರ ಪರಿಣಾಮವಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸುಮಾರು ರೂ. 3,850 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ, ಕಳೆದ ವರ್ಷದ ಏಪ್ರಿಲ್ನಿಂದ ಇದುವರೆಗಿನ ವಿಶೇಷ ಪ್ಯಾಕೇಜ್ ಗೆ ಅನುಮೋದಿಸಿದ ಒಟ್ಟು ಮೊತ್ತ ರೂ. 6,475 ಕೋಟಿ ತಲುಪಲಿದೆ.
ಈ ರಸಗೊಬ್ಬರಗಳ 28 ಗ್ರೇಡ್ಗಳನ್ನು ರಸಗೊಬ್ಬರ ಉತ್ಪಾದಕರು ಮತ್ತು ಆಮದುದಾರರ ಮೂಲಕ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಎರಡನೆಯದಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಪುನರ್ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಕೂಡ 2025 ಹಾಗೂ 2026ರವರೆಗೆ ಮುಂದುವರೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ರೈತರ ಪಾಲಿಗೆ ಬಹಳ ಅನುಕೂಲಕರ. ಈಗ ಈ ಯೋಜನೆಗಳ ಅವಧಿಯನ್ನು ವಿಸ್ತರಣೆ ಮಾಡಿರುವುದರ ಪರಿಣಾಮವಾಗಿ ಹೆಚ್ಚುವರಿ ಒಂದು ವರ್ಷಕ್ಕೆ ನೈಸರ್ಗಿಕ ವಿಕೋಪಗಳಿಂದ ರೈತನ ಬೆಳೆಗಳಿಗೆ ವಿಮೆ ಸಿಗಲಿದೆ.
ಹೆಚ್ಚುವರಿ ಒಂದು ವರ್ಷದ ಅವಧಿಗೆ ಸುಮಾರು 3000 ಕೋಟಿ ಬಜೆಟ್ ಅಂದಾಜಿಸಲಾಗಿದ್ದರು ಇದರಿಂದ ರೈತನಿಗೆ ಬಹಳ ಅನುಕೂಲತೆ ಇರುವುದರಿಂದ ಮತ್ತು ರೈತನು ಕೂಡ ಈ ಯೋಜನೆಗಳ ಬಗ್ಗೆ ಆಸಕ್ತಿ ಹೊಂದಿರುವುದರಿಂದ ಯೋಜನೆಗಳ ಅವಧಿಯನ್ನು ವಿಸ್ತರಿಸಲಾಗಿದೆ.
ಇದರ ಜೊತೆಗೆ ರೈತನ ಅನುಕೂಲತೆಗಾಗಿ ಹವಾಮಾನ ಮಾಹಿತಿ, ನೆಟ್ವರ್ಕ್ ಡೇಟಾ ಸಿಸ್ಟಮ್ ಉಪಕ್ರಮದಡಿ ಬ್ಲಾಕ್ ಮಟ್ಟದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಹಾಗೂ ಪಂಚಾಯಿತಿ ಮಟ್ಟದಲ್ಲಿ ಸ್ವಯಂಚಾಲಿತ ಮಳೆ ಮಾಪಕ ಸ್ಥಾಪಿಸಲು ಚರ್ಚಿಸಿ ತೀರ್ಮಾನಿಸಲಾಗಿದೆ ಮತ್ತು ಶೀಘ್ರದಲ್ಲಿಯೇ ಯೋಚನೆ ಕಾರ್ಯರೂಪಕ್ಕೆ ಬರುವ ಭರವಸೆ ಇದೆ.
ಇದು ಹವಾಮಾನಕ್ಕೆ ತಕ್ಕಂತೆ ಬೆಳೆ ಬೆಳೆಯಲು ನೆರವಾಗಲಿದೆ. ಮೊಬೈಲ್ ನೆಟ್ವರ್ಕ್ ಇಲ್ಲದ ಕುಗ್ರಾಮಗಳ ರೈತರು ಕೂಡ ಈ ಕೇಂದ್ರಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಗಳು ರೈತನಿಗೆ ಅಪಾರ ಅನುಕೂಲತೆ ಮಾಡಿಕೊಳ್ಳಲಿದೆ ಹೀಗಾಗಿ ರೈತರಿಗೆ ಅನುಕೂಲತೆ ಮಾಡಿಕೊಡುವ ಉದ್ದೇಶದಿಂದ ಈ ಮಾಹಿತಿಯನ್ನು ಹೆಚ್ಚಿನ ರೈತರೊಡನೆ ಶೇರ್ ಮಾಡಿ.