Borewell
ರೈತರಿಗೆ ತಮ್ಮ ಕೃಷಿ ಚಟುವಟಿಕೆ ನೀರಿನ ವ್ಯವಸ್ಥೆ ಎಲ್ಲಕ್ಕಿಂತ ಮುಖ್ಯವಾದುದ್ದು. ಮಳೆ ಆಶ್ರಿತ ಜಮೀನುಗಳಿಗಿಂತ ನೀರಾವರಿ ಸೌಕರ್ಯ ಇರುವ ಕಡೆ ಆಹಾರ ಉತ್ಪಾದನೆ ಹಾಗೂ ಈ ಮೂಲಕ ರೈತನ ಆದಾಯ ಕೂಡ ಹೆಚ್ಚಾಗಿರುವುದರಿಂದ ಸಾಲ-ಸೋಲ ಮಾಡಿಯಾದರೂ ರೈತರು ತಮ್ಮ ಜಮೀನುಗಳಿಗೆ ಕೊಳವೆಬಾವಿ ಕೊರೆಸಲು ಪ್ರಯತ್ನಿಸುತ್ತಾರೆ.
ಆದರೆ ಇತ್ತೀಚಿಗೆ ಕೊಳವೆ ಬಾವಿ(Borewell) ಕೊರೆಸುವುದಕ್ಕೆ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಸೂಚಿಸಲಾಗಿದೆ. ಕೊಳವೆ ಬಾವಿಗೆ ಮಕ್ಕಳು ಬೀಳುವ ಪ್ರಕರಣಗಳು ಹೆಚ್ಚಾಗಿದ್ದೆ ಇದಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ಕರ್ನಾಟಕ ಅಂತರ್ಜಲ (ಅಭಿವೃದ್ದಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012 ಕ್ಕೆ ತಿದ್ದುಪಡಿ ಸಂಬಂಧ ರಾಜ್ಯ ಸರ್ಕಾರವು ರಾಜ್ಯ ಪತ್ರ ಹೊರಡಿಸಿದೆ ಅದರ ಸಂಬಂಧಿತ ಪೂರ್ತಿ ಮಾಹಿತಿ ಹೀಗಿದೆ ನೋಡಿ.
* ಭೂಮಿಯ ಮಾಲೀಕನಾದ ರೈತ ಅಥವಾ ಕೊಳವೆ ಬಾವಿ ತೆರೆಯುವ ಏಜೆನ್ಸಿಯು ಕೊಳವೆ ಬಾವಿಯನ್ನು ತೋಡುವ ಮೊದಲು ಕನಿಷ್ಟ 15 ದಿನಗಳಿಗೆ ಮುಂಚಿತವಾಗಿ ಸರ್ಕಾರದ ಸೂಚನೆ ಹಾಗೂ ಸಂದರ್ಭಾನುಸಾರ ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರದ ಸ್ಥಳೀಯ ಸಂಸ್ಥೆಗೆ ಲಿಖಿತದಲ್ಲಿ ಮಾಹಿತಿಯನ್ನು ತಿಳಿಸಬೇಕು.
* ಕೊಳವೆ ಬಾವಿ ಕೊರೆಸುವಿಕೆ ಕಾರ್ಯ ಮುಗಿದ ನಂತರ ತಕ್ಷಣ ಕೊರೆಯುವ ಏಜೆನ್ಸಿಯು ತೆರೆದ ಕೊಳವೆ ಬಾವಿಯಿಂದ ಮಾರಣಾಂತಿಕ ಆಕಸ್ಮಿಕಗಳನ್ನು ತಡೆಯಲು ಸುರಕ್ಷತಾ ಕ್ರಮವಾಗಿ ಬೋಲು ಮತ್ತು ನಟ್ಟುಗಳೊಂದಿಗೆ ಸ್ಟೀಲು ಮುಚ್ಚಳದ ಮೂಲಕ ಅಥವಾ ಫ್ರೆಡ್ ಮಾಡಲಾದ ಮುಚ್ಚಳದ ಮೂಲಕ ಕೊಳವೆ ಬಾವಿಯನ್ನು ಮುಚ್ಚಬೇಕು.
* ಒಂದು ವೇಳೆ ಈ ಮಿಷನ್ ಫೇಲ್ ಆಗಿ ಅಥವಾ ಕಾರಣಾಂತರಗಳಿಂದ ಪೂರ್ತಿಯಾಗದೆ ಹೋದಲ್ಲಿ ಕೊಳವೆ ಬಾವಿಯ ಜಾಗದಲ್ಲಿ ಗುದ್ದುಬೀಳುವುದು ಮತ್ತು ಕುಸಿಯುವುದನ್ನು ತಡೆಗಟ್ಟಲು, ಅದನ್ನು ಸ್ಥಳೀಯ ಬಳಕೆಯ ಕಲ್ಲುಗಳು ಮತ್ತು ತಿಳಿ ಕೆಸರಿನಿಂದ ತುಂಬತಕ್ಕದ್ದು ಹಾಗೂ ನೆಲ ಮಟ್ಟದಿಂದ ಮೇಲೆ 2×2 ದಿಬ್ಬವನ್ನು ಕಟ್ಟತಕ್ಕದ್ದು. ದಿಬ್ಬಕ್ಕೆ ಮುಳ್ಳು, ತಂತಿ ಅಥವಾ ಸ್ಥಳೀಯವಾಗಿ ಸಿಗುವ ಮುಳ್ಳು ಗಿಡಗಳೊಂದಿಗೆ ಬೇಲಿ ಹಾಕತಕ್ಕದ್ದು. ಘನ ತ್ಯಾಜ್ಯ ಅಥವಾ ರಾಸಾಯನಿಕ ತ್ಯಾಜ್ಯ ಪದಾರ್ಥಗಳಿಂದ ಹಾಗೆ ತುಂಬುವಂತಿಲ್ಲ ಎನ್ನುವುದು ಸೂಚನೆಯಲ್ಲಿ ಸೇರಿದೆ
* ಜಮೀನಿನ ಮಾಲೀಕ ಅಥವಾ ಬೋರ್ವೆಲ್ ಕೊರೆಯುವ ಏಜೆನ್ಸಿಯು 24 ಗಂಟೆಗಳೊಳಗಾಗಿ ಈ ಮೇಲೆ ತಿಳಿಸಿದಂತೆ ಫೇಲ್ ಆದ ಅಥವಾ ಅರ್ಧಕ್ಕೆ ಬಿಡಲಾದ ಕೊಳವೆ ಬಾವಿಯನ್ನು ಸುರಕ್ಷಿತವಾಗಿ ಮುಚ್ಚಬೇಕು ಹಾಗೂ ಈ ಕುರಿತು ಕೈಗೊಂಡ ಕ್ರಮವನ್ನು ಮುಚ್ಚಲಾದ ಕೊಳವೆ ಬಾವಿಯ ಛಾಯಾಚಿತ್ರಗಳೊಂದಿಗೆ ತಕ್ಷಣವೇ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ತಿಳಿಸಬೇಕು ಹಾಗೂ ಪ್ರಾಧಿಕಾರವು ಪರಿಶೀಲನೆ ನಡೆಸಿ ಕೊಳವ ಬಾವಿಯನ್ನು ಮುಚ್ಚಲಾಗಿದೆ ಎಂದು ಪ್ರಮಾಣೀಕರಿಸಿದ ಪ್ರಮಾಣಪತ್ರವನ್ನು ನೀಡಬೇಕು.
* ಕೊಳವ ಬಾವಿಯನ್ನು ಮುಚ್ಚಲಾಗಿದೆ ಎಂದು ಪ್ರಮಾಣೀಕರಿಸಿದ ಪ್ರಮಾಣಪತ್ರವನ್ನು ಹತ್ತಿರದ ಗ್ರಾಮ ಪಂಚಾಯತಿ ಅಥವಾ ಗ್ರಾಮ ಆಡಳಿತಾಧಿಕಾರಿಗೆ, ನಗರ ಸ್ಥಳೀಯ ನಿಕಾಯದ ಅಧಿಕಾರವ್ಯಾಪ್ತಿಯಲ್ಲಿನ ಸಂಬಂಧಿತ ಪೌರಾಡಳಿತ ಆಯುಕ್ತ ಅಥವಾ ಸಂದರ್ಭಾನುಸಾರವಾಗಿ, ಮುಖ್ಯಾಧಿಕಾರಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗೆ ಸಲ್ಲಿಸಬೇಕು.
* ದುರಸ್ತಿಗಳ ಸಂದರ್ಭದಲ್ಲಿ ಅರೆಮುಳುಗಡೆ (submersible) ಪಂಪ್ ಅನ್ನು ತೆಗೆಯಲಾದ ನಂತರ ತಕ್ಷಣವೇ ಮಾಲೀಕ ಅಥವಾ ಏಜೆನ್ಸಿಯು ಕೊಳವೆ ಬಾವಿಯನ್ನು ಮಾರಣಾಂತಿಕ ಆಕಸ್ಮಿಕಗಳನ್ನು ತಡೆಯಲು ಸುರಕ್ಷತಾ ಕ್ರಮವಾಗಿ ಬೋಲು ಮತ್ತು ನಟ್ಟುಗಳೊಂದಿಗೆ ಸ್ಟೀಲು ಮುಚ್ಚಳದ ಮೂಲಕ ಅಥವಾ ಫ್ರೆಡ್ ಮಾಡಲಾದ ಮುಚ್ಚಳದ ಮೂಲಕ ಯುಕ್ತವಾಗಿ ಮುಚ್ಚಬೇಕು.
* ಮುಖ್ಯವಾಗಿ ಆ ಸ್ಥಳದ ಅಪಾಯಗಳ ಕುರಿತು ಕೊಳವೆ ಬಾವಿ ಜಾಗದಲ್ಲಿ ಸೂಚನಾಫಲಕಗಳನ್ನು ನಿಲ್ಲಿಸಬೇಕು.
* ಕೊಳವೆ ಬಾವಿಗಳಿಗೆ ಬೇಲಿ ಹಾಕುವುದು ಕೊರೆಯುವ ಏಜೆನ್ಸಿಯು ಕೊರೆಯುವಾಗ, ದುರಸ್ತಿಗೊಳಿಸುವಾಗ, ಪುನರುಜ್ಜಿವನಗೊಳಿಸುವಾಗ ಸಂಬಂಧಪಡುವ ವ್ಯಕ್ತಿಗಳ ಅಥವಾ ಮಕ್ಕಳ ಪ್ರವೇಶವನ್ನು ತಪ್ಪಿಸಲು ಕೊರೆ ಬಾವಿ ಅಥವಾ ಕೊಳವೆ ಬಾವಿಯ ಸುತ್ತಲೂ ಮುಳ್ಳು ತಂತಿ ಬೇಲಿ ಅಥವಾ ಯಾವುದೇ ಇತರ ಸೂಕ್ತ ತಡೆಗೋಡೆಯನ್ನು ನಿಲ್ಲಿಸಬೇಕು ಎಂದು ಕೂಡ ಸುರಕ್ಷತ ದೃಷ್ಟಿಯಿಂದ ತಿಳಿಸಿದೆ.
* ಒಂದು ವೇಳೆ ಮೇಲೆ ತಿಳಿಸಿದ ನಿಯಮಗಳನ್ನು ಪಾಲಿಸುವಲ್ಲಿ ಆಸ್ತಿಯ ಮಾಲೀಕನಾಗಲಿ ಅಥವಾ ಬೋರ್ವೆಲ್ ಕೊರೆಯುವ ಏಜೆನ್ಸಿಯಾಗಲಿ ಅಥವಾ ಸಂಬಂಧ ಪಟ್ಟ ಪ್ರಾಧಿಕಾರಗಳೇ ಆಗಲಿ. ವೈಫಲ್ಯ ಹೊಂದಿದ್ದರೆ ದಂಡ ಸಮೇತ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎನ್ನುವುದನ್ನು ಕೂಡ ಸವಿವರವಾಗಿ ರಾಜ್ಯ ಪತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.